ತೆರಕಣಾಂಬಿ ಬೊಮ್ಮರಸ
- ಕಾಲ: ಕ್ರಿ.ಶ.ಸು.೧೪೮೫. ಈತ ಜೈನ ಕವಿ.
- ಕೃತಿಗಳು: ಸನತ್ಕುಮಾರ ಚರಿತೆ ಮತ್ತು ಜೀವಂಧರ ಸಾಂಗತ್ಯ
- ಸನತ್ಕುಮಾರ ಚರಿತೆಯು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ವಡ್ಡಾರಾಧನೆಯಲ್ಲಿ ಬರುವ ಸನತ್ಕುಮಾರ ಎಂಬ ಚಕ್ರವರ್ತಿಯ ನೋಂಪಿಯ ಕಥೆಯಾಗಿದೆ.
- ಜೀವಂಧರ ಸಾಂಗತ್ಯ ವು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಇದು ಭಾಸ್ಕರ ಕವಿ ಭಾಮಿನೀಷಟ್ಪದಿಯಲ್ಲಿ ರಚಿಸಿರುವ ಜೀವಂಧರ ಚರಿತೆ ಕೃತಿಯ ಆಧಾರದಿಂದ ರಚಿತವಾಗಿದೆ. ಇದು ಜೀವಂಧರ ಎಂಬ ರಾಜನ ಕಥೆ.
ಜೀವಂಧರನ ಕಥೆಯನ್ನೊಳಗೊಂಡ, ಈ ವರೆಗೆ ದೊರೆತ ಗ್ರಂಥಗಳು ಕೆಳಗಿ ನಂತಿವೆ:
- ಜೀವಂಧರನ ಚರಿತೆ : ಮೇಲೆ ಉಲ್ಲೇಖಿತವಾದ ಗುಣಭಧ್ರಾಚಾರ್ಯರ ಉತ್ತರ ಪುರಾಣದಲ್ಲಿ ಬಂದಿರುವ ಕಥೆ. ಇದು ಸಂಸ್ಕೃತದಲ್ಲಿದೆ.
- ಜೀವಂಧರ ಚರಿತೆ : ಕ್ರಿ. ಶ. ೯೬೫ ರಲ್ಲಿ ಪುಷ್ಪದಂತನಿಂದ ಅಪಭ್ರಂಶದಲ್ಲಿ ರಚಿತವಾದ ಮಹಾಪುರಾಣದಲ್ಲಿ ಬಂದಿರುವ ಜೀವಂಧರನ ಚರಿತ್ರೆ.
- ಗದ್ಯ ಚಿಂತಾಮಣಿ : ಇದು ಅಲಂಕಾರಯುಕ್ತ ಸಂಸ್ಕೃತದಲ್ಲಿ ಒಡೆಯದೇವ ವಾದೀಭಸಿಂಹನಿಂದ ರಚಿತವಾದ ಗದ್ಯಗ್ರಂಥ (೧೧ನೆಯ ಶತಮಾನ).
- ಕ್ಷತ್ರ ಚೂಡಾಮಣಿ : ಇದೂ ಸಹ ವಾದೀಭಸಿಂಹನಿಂದ ಸಂಸ್ಕೃತದಲ್ಲಿ ಅನುಷ್ಟುಬ್ ಪದ್ಯಗಳಲ್ಲಿ ರಚಿತವಾದ ಗ್ರಂಥ. (೧೧ನೆಯ ಶತಮಾನ).
- ಜೀವಂಧರ ಚಂಪೂ : ಇದು ಚಂಪೂರೂಪದಲ್ಲಿ ಬರೆದ ಸಂಸ್ಕೃತ ಗ್ರಂಥ, ಇದನ್ನು ಹರಿಚಂದ್ರ ಎಂಬ ಮಹಾಕವಿ ರಚಿಸಿದ್ದಾನೆ. (೧೧ನೆಯ ಶತಮಾನ).
- ಜೀವಂಧರ ಚರಿತ್ರ : ಶುಭಚಂದ್ರ ಎಂಬ ಕವಿಯಿಂದ ಸಂಸ್ಕೃತದಲ್ಲಿ ರಚಿತವಾದ ಗ್ರಂಥ.
- ಜೀವಕ ಚಿಂತಾಮಣಿ : ತಮಿಳು ಸಾಹಿತ್ಯದ ಐದು ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ಈ ಗ್ರಂಥವು ತಮಿಳು ಭಾಷೆಯಲ್ಲಿ ತಿರುತಕ್ಕ ದೇವರ್ ಎಂಬವನಿಂದ ರಚಿತವಾದ ಗ್ರಂಥ. ಇದಕ್ಕೆ ನಚ್ಚಿನಾರ್ ಕಿನಿಯಾರ್ ಎಂಬವನಿಂದ ಉತ್ತಮ ಟೀಕೆಯೂ ಇದೆ. (೧೦ – ೧೧ನೆಯ ಶತಮಾನ)
- ಜೀವಂಧರ ಚರಿತೆ : ಬಹುಶಃ ಅಪಭ್ರಂಶದಲ್ಲಿರುವ ಜೀವಂಧರ ಕಥೆಯನ್ನೊಳಗೊಂಡಿರುವ ಗ್ರಂಥ. ಇದನ್ನು ರಯಿಧು ಎಂಬ ಕವಿ ಕ್ರಿ.ಶ. ೧೪೩೯ ರ ಸುಮಾರಿಗೆ ಬರೆದಿದ್ದಾನೆ.
- ಜೀವಂಧರ ಚರಿತೆ : ಭಾಸ್ಕರ ಕವಿಯಿಂದ ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಪ್ರಸ್ತುತ ಗ್ರಂಥ.
- ಜೀವಂಧರ ಸಾಂಗತ್ಯ : ಕನ್ನಡದಲ್ಲಿ ಕವಿ ತೆರಕಣಾಂಬಿ ಬೊಮ್ಮರಸನಿಂದ ಸಾಂಗತ್ಯದಲ್ಲಿ ರಚಿತವಾದ ಗ್ರಂಥ. (ಸು. ಕ್ರಿ. ಶ. ೧೪೮೫, ಭಾಸ್ಕರ ಕವಿಯಿಂದ ಈ ಕವಿ ಪ್ರಭಾವಿತನಾಗಿರಬಹುದೆಂದು ಅನ್ನಿಸುತ್ತದೆ. ಆದರೂ ಆತನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ.)
- ಜೀವಂಧರ ಷಟ್ಪದಿ : ಕೋಟೇಶ್ವರನೆಂಬ ಕವಿಯಿಂದ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕನ್ನಡ ಗ್ರಂಥ. ಇದು ಅಪೂರ್ಣವಿದೆ. (ಸು. ಕ್ರಿ.ಶ. ೧೫೦೦).
- ಜೀವಂಧರ ಚರಿತೆ : ಬ್ರಹ್ಮಕವಿ ಎಂಬವನಿಂದ ಸಾಂಗತ್ಯದಲ್ಲಿ ರಚಿತವಾದ ಕನ್ನಡ ಗ್ರಂಥ. ಇದರ ವಿವರ ತಿಳಿಯುವದಿಲ್ಲ.
- ಜೀವಂಧರ ರಾಸ : ಬ್ರಹ್ಮಜಿನದಾಸ ಎಂಬ ಕವಿಯಿಂದ ಗುಜರಾತಿಯಲ್ಲಿ ರಚಿತವಾದ ಗ್ರಂಥ (೧೫ನೆಯ ಶತಮಾನ)
- ಜೀವಂಧರ ಪುರಾಣ : ಜಿನಸಾಗರ ಎಂಬವರಿಂದ ಮರಾಠಿಯಲ್ಲಿ ರಚಿತವಾದ ಗ್ರಂಥ. (ಗುಜರಾತಿ ಗ್ರಂಥದ ಆಧಾರದ ಮೇಲೆ ರಚಿತವಾದ ಈ ಗ್ರಂಥ ೧೮ನೇ ಶತಮಾನದ್ದು.)
- ‘ಜೀವಂಧರ ನಾಟಕ’ ಎನ್ನುವ ಗ್ರಂಥವೂ ಇದೆಯೆಂದು ಪ್ರತೀತಿ. ಆದರೆ ಗ್ರಂಥ ಸಿಕ್ಕಿಲ್ಲ.[2]
- ಜೀವಂಧರ ಚರಿತೆ : ಕೂಡಲಗಿರಿಯಾಚಾರ್ಯ ಎಂಬ ಕವಿಯಿಂದ ಕನ್ನಡದಲ್ಲಿ ರಚಿತವಾದ ಗ್ರಂಥ. (೧೯ನೆಯ ಶತಮಾನ).[3]
ಮೇಲಿನ ಗ್ರಂಥಗಳಲ್ಲಿ ಕನ್ನಡ ಗ್ರಂಥಗಳೇ ಐದು ಇವೆಯೆಂಬುದನ್ನು ಲಕ್ಷಿಸಿದರೆ, ಕನ್ನಡ ನಾಡಿನಲ್ಲಿ ಜೀವಂಧರನ ಚರಿತ್ರೆಯು ಎಷ್ಟು ಜನಪ್ರಿಯವಾಗಿರಬೇಕೆಂಬುದರ ಕಲ್ಪನೆ ಬರುವಂತಿದೆ. ಇಂತಹ ಒಂದು ಪುಣ್ಯ ಚರಿತ್ರೆಯನ್ನು ಕನ್ನಡ ಜನತೆಗೆ ಮೊಟ್ಟ ಮೊದಲಿಗೆ ಒದಗಿಸಿದ ಶ್ರೇಯಸ್ಸು ಕವಿ ಭಾಸ್ಕರನಿಗೆ ಸಲ್ಲುತ್ತದೆ.