ನೀಲಾಂಬಿಕೆ
ನೀಲಾಂಬಿಕೆ/ನೀಲಲೋಚನೆ ಮೇಲ್ಮಟ್ಟದ ಶಿವಶರಣೆ. ಬಸವಣ್ಣನವರ ಧರ್ಮಪತ್ನಿ. ನೀಲಲೋಚನೆ ಎಂಬ ಹೆಸರಿನಿಂದಲೂ ಈಕೆಯನ್ನು ಗುರ್ತಿಸಲಾಗುತ್ತದೆ. ಇವರಿಗೆ ಸಂಗಯ್ಯನೆಂಬ ಮಗುವೊಂದು ಹುಟ್ಟಿ ಅಕಾಲ ಮರಣಕ್ಕೆ ತುತ್ತಾಗುತ್ತದೆ. ಆ ನೋವನ್ನು ಮರೆಯಲು ನೀಲಾಂಬಿಕೆಯವರು ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ದಾಸೋಹ ಕಾರ್ಯದಲ್ಲಿ ಸಮರ್ಪಣಾಭಾವದಿಂದ ಸಹಕರಿಸುತ್ತಾರೆ. ಕಲ್ಯಾಣದ ಕ್ರಾಂತಿಯಾಗಿ ಶಿವಶರಣರು, ಬಸವಣ್ಣ ಚದುರಿದಾಗ ಇವಳು ತನ್ನ ಶುದ್ಧನಡೆ - ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರಳಾದರು. ಈಕೆಯಭಕ್ತಿ, ತಾಳ್ಮೆ, ಕಾಯಕನಿಷ್ಠೆ, ಜ್ಞಾನ, ವೈರಾಗ್ಯಗಳು ಅವಳ ವಚನಗಳಲ್ಲಿ ಮೈದಾಳಿವೆ. ಈಕೆಯ ವಚನಗಳ ಅಂಕಿತ "ಸಂಗಯ್ಯಾ" ಇದು ಆಕೆಯ ಮಗನ ಹೆಸರು.
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ
ಶಿಶುವಾದೆನು ಬಸವನೆನ್ನ ಶಿಶುವಾದನು
ಪ್ರಥಮರ ಪುರಾತನರ ಸಾಕ್ಷಿಯಾಗಿ
ಸಂಗಯ್ಯನಿಕ್ಕದ ದಿಬ್ಬವ ಮೀರದೆ ಬಸವನೊಳಡಗಿದೆ||